1 Chronicles 16

1ಅವರು ದೇವರ ಮಂಜೂಷವನ್ನು ತಂದು ದಾವೀದನು ಅದಕ್ಕೋಸ್ಕರ ಮಾಡಿಸಿದ್ದ ಗುಡಾರದಲ್ಲಿಟ್ಟು ದೇವರಿಗೋಸ್ಕರ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು. 2ಆ ಯಜ್ಞಗಳು, ಹೋಮಗಳು ಸಮರ್ಪಣೆಯಾದ ನಂತರ ದಾವೀದನು ಇಸ್ರಾಯೇಲರನ್ನು ಯೆಹೋವನ ಹೆಸರಿನಿಂದ ಆಶೀರ್ವದಿಸಿದನು. 3ಹಾಗೂ ಅವರಲ್ಲಿ ಪ್ರತಿಯೊಬ್ಬ ಪುರುಷ ಹಾಗು ಸ್ತ್ರಿಗೂ ಒಂದು ರೊಟ್ಟಿಯನ್ನೂ, ಒಂದು ತುಂಡು ಬೇಯಿಸಿದ ಮಾಂಸವನ್ನೂ ಮತ್ತು ದ್ರಾಕ್ಷೇಹಣ್ಣಿನ ಒಂದು ಗೊಂಚಲನ್ನೂ ಕೊಡಿಸಿದನು.

ಮಂಜೂಷದ ಮುಂದೆ ಹಾಡಿದ ಕೀರ್ತನೆ

4ಯೆಹೋವನ ಮಂಜೂಷದ ಮುಂದೆ ದೇವರಾಧನೆ ನಡಿಸುವುದಕ್ಕೋಸ್ಕರ ದಾವೀದನು ಕೆಲವು ಲೇವಿಯರನ್ನು ನೇಮಿಸಿದನು. ಇಸ್ರಾಯೇಲಿನ ದೇವರಾದ ಯೆಹೋವನನ್ನು ಸ್ತುತಿಸುವುದೂ, ಹಾಡಿ ಹರಸುವುದೂ ಅವರ ಕರ್ತವ್ಯವಾಗಿತ್ತು. 5ಅವರಲ್ಲಿ ಆಸಾಫನು ಪ್ರಧಾನನು. ಜೆಕರ್ಯನು ಎರಡನೆಯವನು. ಯೆಗೀಯೇಲ್, ಶೆಮೀರಾಮೋತ್, ಯೆಹೀಯೇಲ, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್, ಯೆಗೀಯೇಲ್ ಇವರು ಸ್ವರಮಂಡಲ, ಕಿನ್ನರಿ ಮೊದಲಾದ ವಾದ್ಯಗಳನ್ನು ನುಡಿಸುವವರು, ಆಸಾಫನು ಕೈತಾಳ ಹಾಕುವುದಕ್ಕೆ ನೇಮಿಸಲಾಯಿತು. 6ಬೆನಾಯ, ಯೆಹಜೀಯೇಲ್ ಎಂಬ ಯಾಜಕರು ದೇವರ ಒಡಂಬಡಿಕೆ ಮಂಜೂಷದ ಮುಂದೆ ನಿತ್ಯವೂ ತುತೂರಿಗಳನ್ನು ಊದುವುದಕ್ಕೆ ನೇಮಕವಾದರು.

7ದಾವೀದನು ಆಸಾಫನನ್ನೂ, ಅವನ ಸಹೋದರರನ್ನೂ ಯೆಹೋವನನ್ನು ಕೊಂಡಾಡಿ ಕೀರ್ತಿಸುವುದಕ್ಕಾಗಿ ಸ್ತೋತ್ರಗೀತೆಗಳನ್ನು ಹಾಡುವುದಕ್ಕಾಗಿ ಆ ದಿನದಲ್ಲೇ ಮೊದಲು ನೇಮಿಸಿದನು. ಅವರು ಹಾಡಿದ್ದೇನಂದರೆ;

8<<ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನ ನಾಮದ ಮಹತ್ವವನ್ನು ವರ್ಣಿಸಿರಿ. ಜನಾಂಗಗಳಲ್ಲಿ ಆತನ ಸತ್ಕಾರ್ಯಗಳನ್ನು ಪ್ರಸಿದ್ಧಪಡಿಸಿರಿ.
9ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ.

10ಆತನ ಪರಿಶುದ್ಧನಾಮದಲ್ಲಿ ಸಂತೋಷಪಡಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ನಿತ್ಯವೂ ಅಪೇಕ್ಷಿಸಿ ಹರ್ಷಿಸಲಿ.

11ಯೆಹೋವನನ್ನೂ ಮತ್ತು ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.

12ಆತನ ಸೇವಕನಾದ ಇಸ್ರಾಯೇಲಿನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ಆತನ ಅದ್ಭುತ ಕಾರ್ಯಗಳನ್ನು,

13ಮಹತ್ಕಾರ್ಯಗಳನ್ನು, ನ್ಯಾಯ ನಿರ್ಣಯಗಳನ್ನು ಸ್ಮರಿಸಿರಿ.
14ಯೆಹೋವನೆಂಬಾತನು ನಮ್ಮ ದೇವರು, ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.

15ಆತನು ಸಾವಿರಾರು ತಲೆಮಾರಿನವರೆಗೂ ಇರುವಂತೆ ಮಾಡಿದ ವಾಗ್ದಾನ ಮತ್ತು ಆತನ ಒಡಂಬಡಿಕೆ ಇವುಗಳನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳಿರಿ.

16ಆತನು ಆ ಒಡಂಬಡಿಕೆಯನ್ನು ಅಬ್ರಹಾಮನ ಸಂಗಡ ಮಾಡಿಕೊಂಡನು ಮತ್ತು ಇಸಾಕನಿಗಾಗಿ ವಾಗ್ದಾನ ಮಾಡಿ ಭರವಸೆ ನೀಡಿದನು.
17ಅದು ರಾಜಶಾಸನದಂತಿರುವುದು ಎಂದು ಯಾಕೋಬನಿಗೂ ಶಾಶ್ವತವಾದ ಒಡಂಬಡಿಕೆಯಾಗಿರುವುದೆಂದು ಇಸ್ರಾಯೇಲರಿಗೂ ಮಾತುಕೊಟ್ಟನು.
18ನೀವು ಇನ್ನೂ ಬಹು ಜನರು ಕಾನಾನ್ ದೇಶದಲ್ಲಿ ಪ್ರವಾಸಿಗಳು ಆಗಿರುವಾಗಲೇ

19ಆತನು, <ನಿಮಗೆ ಈ ದೇಶವನ್ನು ಕೊಡುವೆನು ಅದು ನಿಮ್ಮ ಸಂತತಿಯವರಿಗೆ ಸ್ವಾಸ್ತ್ಯವಾಗಿರುವುದು> ಎಂದು ವಾಗ್ದಾನ ಮಾಡಿದನು.

20ಅವರು ದೇಶದಿಂದ ದೇಶಕ್ಕೂ ರಾಜ್ಯದಿಂದ ರಾಜ್ಯಕ್ಕೂ ಹೋಗುತ್ತಿರುವಲ್ಲಿ
21ಅವರಿಗೆ ಯಾರಿಂದಲೂ ಅನ್ಯಾಯವಾಗಲಿ, ಅಪಾಯವಾಗಲಿ ಆಗಲು ಬಿಡಲಿಲ್ಲ. ಆತನು ಅವರ ವಿಷಯದಲ್ಲಿ ಅರಸನ್ನು ಗದರಿಸಿ,
22<ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು. ನನ್ನ ಪ್ರವಾದಿಗಳಿಗೆ ಯಾವ ಕೇಡನ್ನು ಮಾಡಬಾರದು> ಎಂದು ಹೇಳಿದನು.

23ಎಲ್ಲಾ ಭೂನಿವಾಸಿಗಳೇ ಯೆಹೋವನಿಗೆ ಕೀರ್ತನೆಯನ್ನು ಹಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ.

24ಜನಾಂಗಗಳಲ್ಲಿ ಆತನ ಘನತೆಯನ್ನು ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಿಪಡಿಸಿರಿ.

25ಯೆಹೋವನು ದೊಡ್ಡವನು, ಬಹಳವಾಗಿ ಸ್ತುತಿಗೆ ಪಾತ್ರನು ಆಗಿದ್ದಾನೆ. ಎಲ್ಲಾ ದೇವತೆಗಳಲ್ಲಿ ಆತನೇ ಅದ್ಭುತನಾದವನು.

26ಜನಾಂಗಗಳ ದೇವತೆಗಳೆಲ್ಲಾ ಬರೀ ಬೊಂಬೆಗಳೇ. ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದವನು.
27ಆತನ ಸಾನಿಧ್ಯದಲ್ಲಿ ಮಾನ ಮಹಿಮೆಗಳು ಆತನ ಪವಿತ್ರಾಲಯದಲ್ಲಿ ಮಹಿಮೆ, ಸ್ತುತಿಸ್ತೋತ್ರಗಳು, ಸಂತೋಷಗಳೂ ಇರುತ್ತವೆ.

28ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ.

29ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ. ಕಾಣಿಕೆ ಸಹಿತ ಆತನ ಸನ್ನಿಧಿಗೆ ಬನ್ನಿರಿ. ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ನಮಸ್ಕರಿಸಿರಿ.

30ಎಲ್ಲಾ ಭೂನಿವಾಸಿಗಳೇ, ಆತನ ಮುಂದೆ ಸಾಷ್ಟ್ರಾಂಗವೆರಗಿ ನಮಸ್ಕರಿಸಿರಿ. ಭೂಮಿಯು ಸ್ಥಿರವಾಗಿರುವುದು, ಕದಲುವುದಿಲ್ಲ,

31ಗಗನಮಂಡಲವು ಹರ್ಷಿಸಲಿ; ಭೂಲೋಕವು ಸಂತೋಷಿಸಲಿ; ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.

32ಭೂನಿವಾಸಿಗಳಿಗೆ ನ್ಯಾಯತೀರಿಸುವುದಕ್ಕೆ ಬರುವನೆಂದು ಯೆಹೋವನ ಮುಂದೆ ಸಮುದ್ರವೂ ಅದರಲ್ಲಿರುವುದೆಲ್ಲವೂ ಘೋಷಿಸಲಿ.

33ಹೊಲಗಳೂ, ಅವುಗಳ ಪೈರುಗಳೂ ಉಲ್ಲಾಸಿಸಲಿ; ಮತ್ತು ವನದ ಮರಗಳು ಉತ್ಸಾಹ ಧ್ವನಿ ಮಾಡಲಿ.

34ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು; ಆತನ ಕೃಪೆಯು ಶಾಶ್ವತವಾಗಿರುವುದು.

35ನಮ್ಮ ಸಹಾಯಕನಾಗಿರುವ ದೇವರೇ, ನಮ್ಮನ್ನು ರಕ್ಷಿಸು; ಅನ್ಯಜನಗಳಲ್ಲಿ ಚದುರಿಹೋಗಿರುವ ನಮ್ಮನ್ನು ಬಿಡಿಸಿ ಒಟ್ಟುಗೂಡಿಸು; ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು ಅನ್ನಿರಿ.

36ಇಸ್ರಾಯೇಲ್ ದೇವರಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ>> ಎಂದು ಹಾಡಿದರು. ಅವರು ಹೀಗೆ ಹಾಡಿದಾಗ ಸರ್ವಜನರೂ ಆಮೆನ್ ಎಂದು ಯೆಹೋವನನ್ನು ಸ್ತುತಿಸಿದರು.

37ದಾವೀದನು ಯೆಹೋವನ ಒಡಂಬಡಿಕೆ ಮಂಜೂಷದ ಮುಂದೆ ಪ್ರತಿದಿನವೂ ಆರಾಧನೆ ನಡಿಸುವುದಕ್ಕೆ ಆಸಾಫನನ್ನೂ, ಅವನ ಸಹೋದರರನ್ನೂ ಬಾಗಿಲುಕಾಯುವುದಕ್ಕಾಗಿ, 38ಯೆದುತೂನನ ಮಗನಾದ ಓಬೇದೆದೋಮ್ ಮತ್ತು ಹೋಸ ಇವರನ್ನು, ಅವರ ಆರುವತ್ತೆಂಟು ಸಹೋದರರನ್ನೂ ಅಲ್ಲೇ ಇರಿಸಿದನು. 39ಯಾಜಕನಾದ ಚಾದೋಕನನ್ನೂ, ಅವನ ಸಹೋದರರನ್ನೂ ಗಿಬ್ಯೋನಿನ ಪೂಜಾಸ್ಥಳಗಳಲ್ಲಿದ್ದ ಯೆಹೋವನ ಗುಡಾರದ ಬಳಿಯಲ್ಲಿ ಇರಿಸಿದನು.

40ಅವರು ಪ್ರತಿದಿನವೂ ಪ್ರಾತಃಕಾಲ ಮತ್ತು ಸಾಯಂಕಾಲಗಳಲ್ಲಿ ಯೆಹೋವನಿಗೋಸ್ಕರ ಯಜ್ಞವೇದಿಯ ಮೇಲೆ ಸರ್ವಾಂಗಹೋಮಗಳನ್ನು ಮಾಡಿ ಯೆಹೋವನ ಧರ್ಮಶಾಸ್ತ್ರದಲ್ಲಿ ಇಸ್ರಾಯೇಲರಿಗೆ ವಿಧಿತವಾದದ್ದೆಲ್ಲವನ್ನೂ ನೆರವೇರಿಸಬೇಕಾಯಿತು. 41ಅವರ ಬಳಿಯಲ್ಲಿ ಯೆಹೋವನನ್ನು, ಆತನ ಶಾಶ್ವತವಾದ ಕೃಪೆಗೋಸ್ಕರ ಸ್ತುತಿಸುವುದಕ್ಕೆ ಹೇಮಾನ್, ಯೆದುತೂನ ಮತ್ತು ಹೆಸರು ಹೆಸರಾಗಿ ನೇಮಿಸಲ್ಪಟ್ಟ ಬೇರೆ ಜನರೂ ಇದ್ದರು.

42ಹೇಮಾನ್ ಮತ್ತು ಯೆದುತೂನರ ಹತ್ತಿರ ವಾಧ್ಯಗಾರರಿಗಾಗಿ ತುತೂರಿ, ತಾಳ ಮೊದಲಾದ ವಾಧ್ಯಗಳೂ ಮತ್ತು ದೇವಕೀರ್ತನಾ ಸಾಹಿತ್ಯಗಳಿದ್ದವು. ಯೆದುತೂನನ ಮಕ್ಕಳು ದ್ವಾರಪಾಲಕರಾಗಿ ನೇಮಿಸಲ್ಪಟ್ಟರು.

ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು. ದಾವೀದನು ತನ್ನ ಕುಟುಂಬದವರನ್ನು ಆಶೀರ್ವದಿಸುವುದಕ್ಕಾಗಿ ಹೋದನು.

43

Copyright information for KanULB